Sunday, April 12, 2015

ಜಾತ್ಯಾತೀತ ಸಮೀಕ್ಷೆ ನಡೆಸಿ, ಜಾತಿವಾರು ಸಮೀಕ್ಷೆ ನಿಲ್ಲಿಸಿ!

a) ಮೂರು ದಿನಗಳ ಹಿಂದೆ ಒಂದು ಆಟೋ ಅನೌನ್ಸ್ಮೆಂಟ್  ಚಿಂತಾಮಣಿಯೆಲ್ಲಾ ನಡೆಯಿತು. ಆ ಧ್ವನಿ ವರ್ಧಕಗಳಲ್ಲಿ ಜನರಿಗೆ ಸರ್ಕಾರ ಕೈಗೊಂಡಿರುವ ಜಾತಿವಾರು ಸಮೀಕ್ಷೆಯ ವಿಷಯ ಸಾರುತ್ತಿತ್ತು. ಜಾತಿಗಳ ಹೆಸರುಗಳನ್ನು ಹೇಳುತ್ತ ಅದರ ಕ್ರಮಸಂಖ್ಯೆ ಮತ್ತು code ನ ವಿವರಣೆ ಕೊಡುತ್ತ ಊರೆಲ್ಲ ಸಾಗಿತು. ಆ ಜಾತಿ ಆ ನಂಬರ್, ಈ ಜಾತಿ ಈ ನಂಬರ್, ಮತ್ತೊಂದ್ ಜಾತಿ ಮತ್ತೊಂದ್ ನಂಬರ್!
b) ಸಾಮಾಜಿಕ ತಾಣ Facebook ನಲ್ಲಿ ಕೆಲವರು ತಮ್ಮ ಜಾತಿಯ ಬಗ್ಗೆ ವಿವರಿಸುತ್ತ ತಮ್ಮ ಜಾತಿಯ code ಬಗ್ಗೆ ತಿಳುವಳಿಕೆ ನೀಡುತ್ತ ಆ ಜಾತಿಯ ಜನರೆಲ್ಲಾ ಅದೇ code ಆಯ್ದುಕೊಳ್ಳಬೇಕೆಂದು ಬಿನ್ನಹಗಳನ್ನು ಮಾಡುತ್ತಿದ್ದಾರೆ.
c) ಇನ್ನು ಕೆಲವು ಜಾತಿಗಳ ಸಂಘಗಳು ಸಭೆ ಕರೆದು ಸದಸ್ಯರೆಲ್ಲರೂ  ಸರಿಯಾದ code ಗಳಲ್ಲೇ ತಮ್ಮ ಜಾತಿಯ ಹೆಸರನ್ನು ನೊಂದಾಯಿಸಬೇಕೆಂದು ಕರೆ ಕೊಟ್ಟಿದ್ದಾರೆ.
ಅಸಹ್ಯ ಹುಟ್ಟಿಸುವಂತಹ ಬೆಳವಣಿಗೆ!! 
ಇನ್ನೂ ಸೆನ್ಸಸ್ ಶುರುವಾಗುವ ಮುನ್ನವೇ ಸಮಾಜವು ವಿಭಜನೆಯ ಕಡೆ ಮುಖ ಮಾಡುತ್ತಿದೆ. ಸಮಾಜವನ್ನು ಕದಡುವ ವಿಷವಾಗಿ ಪರಿಣಮಿಸುತ್ತಿದೆ ಈ ಸೆನ್ಸಸ್ .  ಈ ಜಾತಿವಾರು ಸಮೀಕ್ಷೆ ಬೇಕಿತ್ತೆ ನಮಗೀಗ?
ಈ ಸರ್ಕಾರದ ಪ್ರತಿನಿಧಿಗಳು " ನೂರು ಕೋಠಿ ವೆಚ್ಚದಲ್ಲಿ ತಾವು ಕೈಗೆತ್ತಿಕೊಂಡಿರುವ ಜಾತಿವಾರು ಸಮೀಕ್ಷೆ ಹಿಂದೆಂದೂ ನಡೆದಿಲ್ಲ,  1931 ರಲ್ಲಿ ಬ್ರಿಟೀಷರ ಆಡಳಿತದಲ್ಲಿ ನಡೆದಿದ್ದು ಬಿಟ್ಟರೆ ನಮ್ಮ ಸರ್ಕಾರದ ನೇತೃತ್ವದಲ್ಲಿ ನಡೆಯುತ್ತಿದೆ" ಎನ್ನುತ್ತಾ ಹೆಮ್ಮೆಯಿಂದ ಬೀಗುತ್ತಿದ್ದಾರೆ.  1931ರ ಆ ಸಮೀಕ್ಷೆ ಭಾರತವನ್ನು ವಿಭಜಿಸುವ ಕುತಂತ್ರದಿಂದಲೇ ಮಾಡಿದ್ದು ಎಂಬ ಅರಿವು ಈ ಪ್ರತಿನಿಧಿಗಳಿಗಿಲ್ಲವೆ?  1930ರಲ್ಲಿ ಗಾಂಧೀಜಿಯವರು Civil Disobedience Movement ಗೆ ಚಾಲನೆ ನೀಡಿದ್ದರು, ನಂತರ ಜೈಲಿಗೂ ಹೋಗಬೇಕಾಯಿತು. ಭಾರತದಲ್ಲಿ ಉತ್ಪತ್ತಿಯಾಗುತ್ತಿದ್ದ ಕಂದಾಯದಲ್ಲಿ ಅರ್ಧಕ್ಕೂ ಹೆಚ್ಚಿನ ಮೊತ್ತವು ಲಂಡನ್ ನ ಬ್ರಿಟಿಶ್ ಸರ್ಕಾರಕ್ಕೆ ಹೋಗುತ್ತಿತ್ತು. ಇದಕ್ಕೆ ಧಕ್ಕೆಯಾಗುವ ಭಯ ನಮ್ಮನ್ನಾಳುವವರಿಗೆ ಕಾಡಿತ್ತು. ಭಾರತದಲ್ಲಿ ಇಂಗ್ಲಿಷರ ವಿರೋಧಿ ಚಟುವಟಿಕೆ ಹಿಂದೆಂದಿಗಿಂತಲೂ ತಿವ್ರವಾಗಿತ್ತು. ಸ್ವಾತಂತ್ರದ ಕೂಗು ತಾರಕಕ್ಕೇರಿತ್ತು. ಇದನ್ನು ಹತ್ತಿಕ್ಕಲು ಬ್ರಿಟೀಷರು ಎಲ್ಲ ಪ್ರಯತ್ನಗಳನ್ನು ಮಾಡಿದರು. ಪರಿಣಾಮವಾಗಿ 1931 ರಲ್ಲಿ ಚಂದ್ರಶೇಖರ್ ಆಜಾದ್  ರನ್ನು ಎನ್ಕೌಂಟರ್ ನಲ್ಲಿ ಹತ್ಯೆ ಮಾಡಿದರು. ಸ್ವತಂತ್ರ ಹೋರಾಟಗಾರರಾದ ಭಗತ್ ಸಿಂಗ್, ರಾಜ್ಗುರು ಮತ್ತು ಸುಖ್ದೇವ್ ರನ್ನು ಗಲ್ಲುಗೇರಿಸಲಾಯಿತು. Divide and Rule ಎಂಬ ತಂತ್ರವನ್ನೇ ಇಟ್ಟುಕೊಂಡು ಬಂದ ಬ್ರಿಟಿಷರು 1931 ರಲ್ಲಿ ಜಾತಿವಾರು ಸಮೀಕ್ಷೆ ಯಾವ ಸದುದ್ದೇಶಕ್ಕೆ ಮಾಡಿರಬಹುದು ನೀವೇ ಹೇಳಿ?
ಈ ಜಾತಿವಾದದ ನಿರ್ಮೂಲನೆಗೆ ಶತಮಾನಗಳಿಂದ ಅನೇಕರು ಪ್ರಯತ್ನಿಸಿದ್ದಾರೆ. ಹನ್ನೆರಡನೇ ಶತಮಾನದಲ್ಲಿ ಶ್ರೀ ಬಸವಣ್ಣನವರು ಜಾತಿವಾದವನ್ನು ಖಂಡಿಸಿ ಜನರಲ್ಲಿದ್ದ್ದ ಜಾತಿ ಕುರಿತಾದ ಅಪನಂಬಿಕೆಗಳನ್ನು ಹೋಗಲಾಡಿಸಿದರು. ರಾಜಾರಾಂ ಮೋಹನ್ ರಾಯ್, ವಿದ್ಯಾಸಾಗರ್, ಅಂಬೇಡ್ಕರ್, ಗಾಂಧೀಜಿ ಮತ್ತು ಇನ್ನೂ ಅನೇಕರು ಈ ಜಾತಿವಾದ ನಮ್ಮ ದೇಶಕ್ಕೊಂದು ಶಾಪವೆಂದರಿತು ಅದರ ವಿರುದ್ದ ಸಮರ ಸಾರಿದ್ಧರು. ಆದರೆ ಕಾಲ ಕಾಲಕ್ಕೆ ಕೆಲವು ರಾಜಕೀಯ ವ್ಯಕ್ತಿಗಳು ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ ಜಾತಿವಾದವನ್ನು ಜೀವಂತವಾಗಿಡುವ ಪ್ರಯತ್ನಗಳು ನಡೆಸುತ್ತಲೇ ಇರುತ್ತಾರೆ. ಆ ಪ್ರಯತ್ನಗಳಲ್ಲಿ ಇದೂ ಒಂದು.  ಮಹಾತ್ಮ ಗಾಂಧಿ ತಮ್ಮ ಪಕ್ಷದವರೇ ಎಂದು ಹೇಳಿಕೊಳ್ಳುವ ಕಾಂಗ್ರೆಸ್ ಸರ್ಕಾರವೇ ಈ ಸಮಾಜ ಘಾತುಕ ಜಾತಿವಾರು ಸಮೀಕ್ಷೆ ನಡೆಸುತ್ತಿರುವುದು ನಿಜಕ್ಕೂ ಖಂಡನೀಯ.

ಜನರಿಗೆ ಸೆನ್ಸಸ್ ಸಮಯದಲ್ಲಿ ಕೊಟ್ಟಿರುವ ಜಾತಿ ಪಟ್ಟಿಯಲ್ಲಿ ಯಾವುದಾದರು ಆಯ್ಕೆ ಮಾಡಿಕೊಳ್ಳುವ ಹಕ್ಕಿದೆ ಎಂದು ಹೇಳುತ್ತಿದ್ದದ್ದಾರೆ  ಸರ್ಕಾರದವರು . ಅದನ್ನು ಯಾರು ಪರಿಸೀಲಿಸುವುದಿಲ್ಲ ಎಂದು ಹೇಳಲಾಗುತ್ತಿದೆ. ಅಂದರೆ, ಇದು fool-proof ಅಲ್ಲವೆಂದು ತಿಳಿಯುತ್ತದೆ. ಸ್ಟ್ಯಾಟಿಸ್ಟಿಕ್ಸ್ ಎಲ್ಲಾ ಏರುಪೇರಾಗುವುದರಲ್ಲಿ ಸಂದೇಹವೇ ಇಲ್ಲ, ನಿಖರವಾಗೂ ಇರುವುದಿಲ್ಲ. . ಫಲಿತಾಂಶ ಊಹಿಸಬಹುದೆಂದಾದಮೇಲೆ ಸಮೀಕ್ಷೆಯ ಉದ್ದೇಶವಾದರೂ ಏನಿರಬಹುದು? 
ಜಾತ್ಯಾತೀತ ಸಮೀಕ್ಷೆ ನಡೆಸಿ, ಜಾತಿವಾರು ಸಮೀಕ್ಷೆ ನಿಲ್ಲಿಸಿ!