Monday, March 16, 2015

ವಿವಿಧ ಸಂಘಟನೆಗಳ ಪ್ರತಿಭಟನಾ ಮೆರವಣಿಗೆ

ತಾರೀಖು 13 ಮಾರ್ಚ್, ಶುಕ್ರವಾರದಂದು ಬೆಳಿಗ್ಗೆ10:30 ಕ್ಕೆ ಚಿಂತಾಮಣಿಯ ಆಜ್ಹಾದ್ - ಚೌಕದಿಂದ  ಹೊರಟ ಪ್ರತಿಭಟನಾ ಮೆರವಣಿಗೆಯು ಸರ್ಕಾರದ ನಿರ್ಲಿಪ್ತತೆಯ ವಿರುದ್ಧ ಘೋಷಣೆಗಳನ್ನು ಕೂಗುತ್ತ ಜನರ ನೀರಿನ  ಬವಣೆಯ ಅಳಲನ್ನು ವ್ಯಕ್ತಪಡಿಸಿದರು. ಇಪ್ಪತ್ತು ದಿನಗಳಿಂದ, ಪಕ್ಷಾತೀತವಾಗಿ ಮತ್ತು ಜಾತ್ಯಾತೀತವಾಗಿ,  ಸತತವಾಗಿ ಧರಣಿ ನಡೆಸುತ್ತಿದ್ದ ಹಲವಾರು ಸಂಘಟನೆಗಳು, ಶಾಶ್ವತ  ನೀರಾವರಿ ಹೋರಾಟ ಸಮಿತಿ ಮತ್ತು ಯುವಶಕ್ತಿ ಕಾರ್ಯಕರ್ತರು , ಸರ್ಕಾರದ ಗಮನ ಸೆಳೆದು, ಮತ್ತು ಜನರಿಗೆ ರೈತರ ಕಷ್ಟದ ತೀವ್ರತೆಯ ಅರಿವು ಮೂಡಿಸುವಲ್ಲಿ ಯಶಸ್ವಿಯಾಯಿತು. ಎಲ್ಲಾ ಅಂಗಡಿ ಮುಂಗಟ್ಟುಗಳು ಸ್ವಯಂಪ್ರೇರಿತರಾಗಿ ಮಧ್ಯಾಹ್ನದವರೆಗು ಬಂದ್ ಮಾಡಿ ವ್ಯಾಪಾರಸ್ತರು ಮೆರವಣಿಗೆಯಲ್ಲಿ ಭಾಗವಹಿಸಿದರು. ಜನರ ಈ ಆಕ್ರೋಶವನ್ನು ಮನಗಂಡ  ಸಂಸತ್ ಸದಸ್ಯರಾದ K.H ಮುನಿಯಪ್ಪನವರು ಧರಣಿ ಸ್ಥಳಕ್ಕೆ ಆಗಮಿಸಿ ಜನರಿಗೆ ಭರವಸೆ ಹಾಗು ಆಶ್ವಾಸನೆ ಕೊಡಲು ಬಂದಿದ್ದರು. ಆದರೆ ಜನರ ಆಕ್ರೋಶದ ಮಾತುಗಳ ಮಧ್ಯೆ ಅವರ ಧನಿ ಕುಗ್ಗಿತು. ಅವರ ಭಾಷಣವನ್ನು ಮಧ್ಯದಲ್ಲೇ ನಿಲ್ಲಿಸಿ ಅಲ್ಲಿಂದ ಜಾಗ ಖಾಲಿ ಮಾಡಬೇಕಾಯಿತು. "ನೀರು ಕೊಡಿ, ಇಲ್ಲವಾದಲ್ಲಿ ವಿಧಾನ ಸೌಧವನ್ನೇ ಮುಚ್ಚಿ" ಎಂಬ ಕೂಗು ಕೇಳಿಬಂತು. 
ಜನರಿಗೆ ಇನ್ನು ಆಶ್ವಾಸನೆಗಳು ಭಾಷಣಗಳು ಬೇಕಿಲ್ಲ. ರಾಜಕೀಯ ಪಕ್ಷಗಳ ಚುನಾವಣೆ ಸಮಯದ ಮರಳು ಮಾಡಿಸುವ, ಮೋಡಿ ಮಾಡುವ ನೀರ್ಗುಳ್ಳೆಯ ಭರವಸೆಗಳು ಬೇಕಿಲ್ಲ. ಸಮಾಜವನ್ನು ಒಡೆಯುವ ದುರುದ್ದೇಶದ ಸರ್ಕಾರಿ ಸವಲತ್ತುಗಳು ಬೇಕಿಲ್ಲ. ಮೋಸಕ್ಕೆ ಎಡೆ ಮಾಡುವ  ಜನಪ್ರಿಯ ಕೊಡುಗೆಗಳು ಬೇಕಿಲ್ಲ. ತೀರ್ಥ ಯಾತ್ರೆಗಳಿಗೆ ಸೌಕರ್ಯ ಬೇಕಿಲ್ಲ. ಮಠ, ಮಂದಿರ, ಮಸೀದಿಗಳಿಗೆ ಅನುದಾನ ಬೇಕಿಲ್ಲ. ಜನರಿಗೆ ಬೇಕಿರುವುದು ಮೂಲಭೂತ ಸೌಕರ್ಯ!! ಸ್ವತಂತ್ರ ಬಂದು ಆರು ದಶಕಗಳಾದರೂ ಜನರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿಲ್ಲದಿರುವುದು ವಿಪರ್ಯಾಸ. ಸಾವಿರಾರು ಕೋಠಿ ರೂಪಾಯಿಗಳು ಹಗರಣಗಳಲ್ಲಿ ಮಾಯವಾಗಿದೆ. ಜನಪರ ಯೋಜನೆಗಳನ್ನು ಕೈಗೆತ್ತಿಕೊಳ್ಳದೆ ಸುಮ್ಮನೆ ಚುನಾವಣೆ ಗೆಲ್ಲುವುದೇ ಮುಖ್ಯ ಆದ್ಯತೆ ಆಗಿಹೋಗಿದೆ. ಎಷ್ಟೋ ರಾಷ್ಟ್ರಗಳಲ್ಲಿ ಬರ ಪ್ರದೇಶವಾಗಿದ್ದರೂ, ಯತೇಚ್ಚವಾಗಿ ನೀರು ಸಿಗುವ ಯೋಜನೆಗಳನ್ನು ಹಾಕಿ ಪೂರ್ತಿಗೊಳಿಸುತ್ತಾರೆ. ಹೊರ ರಾಷ್ಟ್ರಗಳೇಕೆ, ಪಕ್ಕದ ಸೀಮಾಂದ್ರ ಹಾಗು ತೆಲೆಂಗಣ ರಾಜ್ಯಗಳು ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ದೊಡ್ಡ ಪ್ರಮಾಣದಲ್ಲಿ ಯೋಜನೆಗಳನ್ನು ಹಾಕಿಕೊಂಡು ಕಾರ್ಯಪ್ರವೃತ್ತರಾಗಿದ್ದರೆ. ತಮಿಳುನಾಡಿನ ಮುಖ್ಯಮಂತ್ರಿಗೆ ಸದಾ ಕಾವೇರಿಯ ಮೇಲೇ ಕಣ್ಣು. ಅಲ್ಲಿನ ಮುಖ್ಯಮಂತ್ರಿಗಳ ನೀರಿನ ಸಂಕಷ್ಟದ ಸ್ಪಂದನೆ ಜಗಜ್ಜಾಹಿತ. see the link here https://www.youtube.com/watch?v=TkRkLgSkuzg ,  ನಮ್ಮ ರಾಜ್ಯದಲ್ಲಿ  ಯೋಜನೆಗಳೇನು..... ಅದರ ವರದಿಗಳೇನು......ಪುನಃ ಪರಿಶೀಲನೆಗಳೇನು.... ಇದರಲ್ಲೇ ವರ್ಷಗಳು ಕಳೆದು ಬೊಕ್ಕಸ ಖಾಲಿಯಾಗುತ್ತಿದೆ, ವರದಿಗಳಿಗೆ ಜೇಡ ಕಟ್ಟುತ್ತಿದೆ.






ನೀರು ಬಹುಮುಖ್ಯವಾದದ್ದು. ಶುದ್ಧವಾದ ಕುಡಿಯುವ ನೀರಿಲ್ಲದಿದ್ದರೆ ರೋಗಗಳು ಬಂದು ಜನರ ಹಣವೆಲ್ಲಾ ಸುಶ್ರೂಶೆಗೆ ಖ್ಹರ್ಚಾಗುತ್ತದೆ. ಸಮಾಜದ ಆರೋಗ್ಯವನ್ನೇ ಕೆಡಿಸುತ್ತದೆ. ರೈತರು ಕಂಗಾಲಾಗಿ ಉಳುಮೆಯನ್ನು ಬಿಟ್ಟು ನಗರ ಪ್ರದೇಶಗಳನ್ನು ಸೇರುತ್ತಾರೆ. ಇದರಿಂದಲೇ ದೊಡ್ಡ ನಗರಗಳಲ್ಲಿ ಜನ ದಟ್ಟಣೆ ಹೆಚ್ಚುತ್ತಿದೆ. ಸಮರ್ಪಕ ನೀರಿನ ಸರಬರಾಜಿನಿಂದ ನಾಡಿನ ರೂಪು-ರೇಷ ಗಳು ಸಂಪೂರ್ಣ  ಬದಲಾಗುತ್ತದೆ. ಸರ್ವತೋಮುಖ ಅಭಿವೃದ್ಧಿಯಾಗುತ್ತದೆ .
ಕರ್ಣಾಟಕದ ಇಬ್ಬರೇ 'ಭಾರತರತ್ನ' ರನ್ನು,  Sir M. ವಿಶ್ವೇಶ್ವರಯ್ಯ ಮತ್ತು Prof.  CNR ರಾವ್,  ನೀಡಿದ ಜಿಲ್ಲೆಯನ್ನು ಸರ್ಕಾರ ಏಕೆ ನಿರ್ಲಕ್ಷಿಸುತ್ತಿದೆಯೊ ತಿಳಿಯದಾಗಿದೆ. ಇಲ್ಲಿನ ಜನಪ್ರತಿನಿಧಿಗಳ ನಿಶ್ಕ್ರಿಯ ಮನೋಭಾವ ಬೇಸರ, ಅಸಹ್ಯ ಮತ್ತು ಆಕ್ರೋಷ ಎಲ್ಲವೂ ಒಮ್ಮೆಲೇ ಹುಟ್ಟಿಸುತ್ತದೆ. ತಮ್ಮ ಪಕ್ಷಕ್ಕಿಂತ, ಕೂತಿರುವ ಪದವಿಯ ಖೂರ್ಚಿಗಿಂತ ತಮ್ಮನ್ನು ಆಯ್ಕೆ ಮಾಡಿದ ಜನರೇ ಎಲ್ಲಕ್ಕಿಂತಲೂ ಮುಖ್ಯ ಎಂದು ಅರಿತರೆ ಈ ತರಹದ ಸಂಕಷ್ಟ ಒದಗುತ್ತಿರಲಿಲ್ಲ, ಜನರು ನೀರಿಗೂ ಹೊರಡುವಂತ ಪರಿಸ್ತಿತಿ ಬರುತ್ತಿರಲಿಲ್ಲ, ಅವರ ಪ್ರಾಮಾಣಿಕತೆಯನ್ನು ಯಾರೂ ಪ್ರಶ್ನಿಸುತ್ತಿರಲಿಲ್ಲ.